16/07/2017
ಕೆಲಸದ ಒತ್ತಡದಲ್ಲಿ ಬೆಂಡಾದ ಮನಸ್ಸನ್ನು , ಹಳೆಯ ಸುಂದರ ಲೋಕಕ್ಕೆ ಒಯ್ಯುವ ಕೆಲ ಸಾಲುಗಳು..
ಇದನ್ನು ಬರೆದವರ್ಯಾರೊ ಗೊತ್ತಿಲ್ಲ..
ಓದಿ, ....
ಅಂದು ಬಡತನವಿತ್ತು.
ಹಸಿವು ಸೋಲಿಸುತ್ತಿತ್ತು.
ಒಮ್ಮೊಮ್ಮೆ ತಂಗಳನ್ನವಿತ್ತು.
ಇಲ್ಲವಾದರೆ ಹೆತ್ತಬ್ಬೆಯ ಮಡಿಲಿತ್ತು!
ಆಟಿಕೆಗೂ ಬರವಿತ್ತು,ಆಟ ಸಾಗುತಲಿತ್ತು!
ವರ್ಷಕ್ಕೊಂದೇ ಹಬ್ಬವಿತ್ತು.
ದುಂಡಾದ ಇಡ್ಲಿಯಿತ್ತು.
ರುಚಿಸುತ್ತಿದ್ದ ಸಾರಿತ್ತು.
ಅಪ್ಪ ಕೊಡಿಸುತ್ತಿದ್ದ ಹಬ್ಬದ ಬಟ್ಟೆಯಿತ್ತು.
ಸಂಬಂಧ ಬೆಸೆಯುವ ಭೇಟಿಗಳಿತ್ತು.
ಹಬ್ಬದಂದು ಎಂಟತ್ತು ನಾಣ್ಯಗಳಿತ್ತು!
ಆರೇಳು ಕುಟಂಬಗಳು ಬಾಳುವ
ಸಣ್ಣ ಜೋಪಡಿಯಿತ್ತು!
ಮನೆತುಂಬಾ 'ಮಕ್ಕಳ' ನಗುವಿತ್ತು!
ಆಟವಾಡಲು ಅಜ್ಜನ ಆಲದಮರವಿತ್ತು.
ಹೂಂಗುಟ್ಟುತ್ತಾ ಮಲಗಲು ಅಜ್ಜಿಯ ಕತೆಯಿತ್ತು!
ಒಂದೇ ಹಲಸನು ಹಂಚಿ ತಿನ್ನುವ
ಹಲಸದ ಬಂಧಗಳಿತ್ತು!
ಜಾತ್ರೆಯಲಿ ಕೊಂಡ ಪ್ಲಾಸ್ಟಿಕ್ ಚೆಂಡಿತ್ತು.
ತುಟಿ ಕೆಂಪಾಗಿಸುತಿದ್ದ ಪೆಪ್ಪರ್ಮೆಂಟಿತ್ತು.
ಕೈಗೆ ಕಟ್ಟಲು ತೆಂಗಿನಗರಿಯ ವಾಚಿತ್ತು.
ಉಲ್ಟ ದರಿಸಿದ್ದ BYKOF ಚಪ್ಪಲಿಯಿತ್ತು.
ಕೇರಿ ಸುತ್ತಾಟಕ್ಕೆ ಬಂಡಿಯಾಟವಿತ್ತು
ಮಳೆಗಾಲದಲಿ ಹರಿದ ಛತ್ರಿಯಿತ್ತು.
ನೆನೆದು ಒದ್ದೆಯಾಗುವ ಹುಚ್ಚುತನವಿತ್ತು.
ಜ್ವರ ಬಂದರೆ ರಜೆಯೆಂಬ ಖುಷಿಯಿತ್ತು.
ಜ್ವರದ ರಾತ್ರಿಗಳಲಿ ಅಮ್ಮನ ಕಾವಲಿತ್ತು.
ಪಾಚಿಯಲಿ ಜಾರಿದ ಅವಮಾನವಿತ್ತು.
ತೋಡಿನ ನೀರಲೂ ದೋಣಿಯಾಟವಿತ್ತು.
ಮೀನು ಹಿಡಿಯುವ ಅಭ್ಯಾಸವಿತ್ತು.
ಅದಕೆಂದೇ ಅಪ್ಪನ ಹರಿದ ಲುಂಗಿಯಿತ್ತು.
ಸಂಜೆಗೆ ಅಜ್ಜಿ ಕಾಯಿಸಿದ ಹಪ್ಪಳವಿತ್ತು.
ಚಳಿಗಾಲದಿ ಚಳಿಕಾಯಿಸುವಿಕೆಯಿತ್ತು.
ಮೈ ತುಂಬುತಿದ್ದ ಅಜ್ಜನ ಬಟ್ಟೆಯಿತ್ತು.
ಹೊದ್ದು ಮಲಗಲು ಕಂಬಳಿಯಿತ್ತು.
ಸಣ್ಣ ಜೋಪಡಿ ತುಂಬಾ ಕತ್ತಲಿತ್ತು.
ಹಿಡಿದಿಡುತ್ತಿದ್ದ ಮಿಂಚುಹುಳದ ಬೆಳಕಿತ್ತು.
ಬದುಕು ಕಲಿಸುತ್ತಿದ್ದ ಹಳ್ಳಿಯ ಸ್ಕೂಲಿತ್ತು.
ಶಾಲೆಗೆ ನಡೆಯಲು ಗದ್ದೆಯ ದಾರಿಯಿತ್ತು.
ದಾರಿಯ ಮರಗಳಲೂ ಪ್ರೀತಿಯಿತ್ತು.
ತಿನ್ನಲು ಗೇರು,ಮಾವು,ನೇರಳೆಗಳಿತ್ತು.
ಉದಾಸೀನದ ವ್ಯಾಯಾಮವಿತ್ತು.
ನಾಗರಬೆತ್ತದ ಭಯವೂ ಇತ್ತು.
ರಾಗದಿ ಹೇಳುತ್ತಿದ್ದ ಮಗ್ಗಿಯಿತ್ತು.
ಮಾತಾಡಲು ಕ್ಲಾಸ್ಲೀಡರ್ ಭಯವಿತ್ತು.
ಖುಷಿಕೊಡುತ್ತಿದ್ದ ಲಾಂಗ್-ಬೆಲ್ ಇತ್ತು.
ಚೀಲೆಯಲಿ ಕದ್ದ ಬಣ್ಣದ ಬಳಪವಿತ್ತು.
ಮತ್ತೆ ಮತ್ತೆ ತಪ್ಪುತ್ತಿದ್ದ ಉಕ್ತಲೇಖನವಿತ್ತು.
ಬರೆದು ಮುಗಿಯದ imposition ಇತ್ತು.
ಅಳು ತರಿಸಿದ್ದ ಪುಣ್ಯಕೋಟಿ ಕತೆಯಿತ್ತು.
ಸ್ವತಂತ್ರದಂದು ಎರಡು ಬಾವುಟವಿತ್ತು.
ಲಾಡುಕೊಡುವ ಸರದಿಯಲಿ ಜಗಳವಿತ್ತು.
ಖುಷಿಕೊಡುವ ಲಗೋರಿಯಾಟವಿತ್ತು.
ಕಣ್ಣೀರು ತರಿಸುವ ಇಂಜೆಕ್ಷನ್ಗಳಿತ್ತು.
ತಪ್ಪಿಗೆ ಮೈದಾನ ಸುತ್ತುವ ಶಿಕ್ಷೆಗಳಿತ್ತು.
ಬಿಸಿಲಲಿ ತಲೆಸುತ್ತುವ ಭಯವಿತ್ತು. ಬಿದ್ದಾಗ ಟೀಚರಮ್ಮನ ಆರೈಕೆಯಿತ್ತು.
ಕಬಡ್ಡೀಲಿ ಸೋತಂದು ಉಪವಾಸವಿತ್ತು.
ಪ್ರೈಜ್ ಕೊಟ್ಟ ಮೇಷ್ಟ್ರಿಗೆ ಶಾಪವಿತ್ತು.
ನಿಂತನೀರಿಗೆ ಕಲ್ಲೆಸೆದು ಕಪ್ಪೆ ಎಬ್ಬಿಸುತಿದ್ದೆ.
ಕೊಂದ ಓತಿಕೇತಕ್ಕೆ ತಿಥಿ
ಸತ್ತ ಇರುವೆಯ ನೋಡಿ ಅತ್ತಿದ್ದೆ.
ಸಕ್ಕರೆ,ಬೆಲ್ಲ,ಹುಳಿಯ ಕದಿಯುತಿದ್ದೆ.
ಗೆಳೆಯ ಔಟಾಗಲೆಂದು ಮಾಟಮಾಡಿದ್ದೆ.
ಅರ್ಥವಾಗದ ಹಾಸ್ಯಕ್ಕೆ ನಕ್ಕಿದ್ದೆ.
ಮಂಚದಡಿ ಕೂತು ಅಮ್ಮನ ಹೆದರಿಸಿದ್ದೆ.
ದುಂಭಿ ಹಿಡಿದು,ಅದನೂ ಸಾಕುತ್ತಿದ್ದೆ.
ಸಾರಿಗೆ ತಂದ ಟೊಮ್ಯಟೋ ಈಜಲು ಬಿಟ್ಟಿದ್ದೆ.
ಚಂದಮಾಮನ ಹಸಿವಿಗೆಂದು ಉಣುತ್ತಿದ್ದೆ
ಪೇರಳೆ ಕೊಯ್ಯಲು ಮರಹತ್ತುತ್ತಿದ್ದೆ.
ಬಿದ್ದು ಕೈ ಮುರಿದುಕೊಂಡಿದ್ದೆ.
ಐಸ್ಕ್ಯಾಂಡಿ ಕೊಡಿಸಲೆಂದು ಅಳುತ್ತಿದ್ದೆ.
ಕೊಡಿಸಿದಾಗ ಚುಂಬಿಸಿದ್ದೆ.
ಎಲ್ಲರದು ಮುಗಿಯಲೆಂದು ಕಾಯುತ್ತಿದ್ದೆ.
ಏನಿಲ್ಲ ಎನ್ನುತ್ತಿದ್ದ ನನಗಾಗ ಎಲ್ಲಾ ಇತ್ತು.
ಎಲ್ಲಕ್ಕೂ ಮಿಗಿಲಾದ ಮುಗ್ಧತೆಯಿತ್ತು.
ಸ್ನೇಹದ ಅರ್ಥ ತಿಳಿದಿರಲಿಲ್ಲ.
ಸೋಮ, ಪುನಿತ, ಅಬ್ದುಲ್, ಜೊತೆಗಿದ್ದೆ.
ಆಗ ನನ್ನಲಿ ನಿಷ್ಕಪಟ ಸ್ನೇಹವಿತ್ತು.
ಮಾನವತೆಯ ಹೃದಯವಿತ್ತು.
ಹೃದಯದ ಮಾತುಗಳಿತ್ತು.
******************