22/05/2024
ನಮ್ಮ ಶಾಲೆಯ ಭರತನಾಟ್ಯ ಶಿಕ್ಷಕಿ ಶ್ರೀಮತಿ ಸೌಮ್ಯಶ್ರೀ ಶ್ರೀಕಂಠ ಅವರ ಪರಿಚಯ
Sowmya Shree Athmaram
ಹಾಸನದ ಭಾರತೀಯ ಸಂಗೀತ ನೃತ್ಯಕಲಾಶಾಲೆಯ ಗುರು, ರಾಜ್ಯಪ್ರಶಸ್ತಿ ಪುರಸ್ಕೃತೆ ವಿದುಷಿ ಅಂಬಳೆ ರಾಜೇಶ್ವರಿ ಅವರಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿ, ರಾಜ್ಯದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡಿ ಸಹೃದಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ 2011ನೇ ಸಾಲಿನ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನ ಉಪಾಧ್ಯ ನೃತ್ಯಶಾಲೆಯ ಅಂತರ್ಶಾಲಾ ಮೂಲಕ ಗುರು ವಿದ್ವಾನ್ ಶ್ರೀ Parshwanath S. Upadhye, ವಿದುಷಿ ಶ್ರೀಮತಿ ಶೃತಿ ಉಪಾಧ್ಯೆ ಹಾಗೂ ವಿದ್ವಾನ್ ಶ್ರೀ ಆದಿತ್ಯ ಅವರಲ್ಲಿ ತಮ್ಮ ನೃತ್ಯಾಭ್ಯಾಸ ಮುಂದುವರೆಸುತ್ತಾ, ಕಲೆಯ ಮೇಲಿನ ಗೌರವದಿಂದ ಅದರ ಬೆಳವಣಿಗೆಗಾಗಿ ತಿಪಟೂರಿನಲ್ಲಿ ಶ್ರೀ ನೃತ್ಯ ಶಾಲೆಯನ್ನು ಸ್ಥಾಪಿಸಿ ಅನೇಕ ತಿಪಟೂರಿನ ಮಕ್ಕಳಿಗೂ ಹಾಗೆಯೇ ಆನ್ಲೈನ್ ಮೂಲಕ ಅನೇಕ ನೃತ್ಯಾಸಕ್ತರಿಗೂ ಕಳೆದ 8 ವರ್ಷಗಳಿಂದ ಶಿಕ್ಷಣ ಪ್ರದಾನ ಮಾಡುತ್ತಿದ್ದಾರೆ.
ಕರ್ನಾಟಕಶಾಸ್ತ್ರೀಯ ಸಂಗೀತ ಕಲಿಕೆಯನ್ನು ಗುರು ವಿದ್ವಾನ್ ಬಿ ಎನ್ ಎಸ್ ಮುರಳಿ ಅವರಲ್ಲಿ ಆರಂಭಿಸಿ, ಮೈಸೂರಿನ ರಾಜ್ಯಪ್ರಶಸ್ತಿ ಪುರಸ್ಕೃತೆ ವಿದುಷಿ ಸುಕನ್ಯಾ ಪ್ರಭಾಕರ್ ಅವರಲ್ಲೂ ಶಿಷ್ಯವೃತ್ತಿ ಮಾಡಿದ್ದಾರೆ .
ಸಾಹಿತ್ಯದ ಮೇಲಿನ ಒಲವಿನಿಂದ ಗಮಕ ಕಲೆಗೆ ಆಕರ್ಷಿತರಾಗಿ, ಚಿಕ್ಕಂದಿನಿಂದಲೇ ಹಾಸನದ ಶ್ರೀಮತಿ ರುಕ್ಮಿಣಿ ನಾಗೇಂದ್ರ ಅವರಲ್ಲಿ ಗಮಕಾಭ್ಯಾಸ ಪ್ರಾರಂಭಿಸಿ ವ್ಯಾಖ್ಯಾನಕಾರರಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. 2010ರ ಅಖಿಲ ಕರ್ನಾಟಕ ಪ್ರಥಮ ಮಕ್ಕಳ ಗಮಕ ಕಲಾ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ, ಗಮಕ ಚಿಗುರು ಎಂಬ ಬಿರುದಿಗೂ ಭಾಜನರಾಗಿದ್ದಾರೆ.
ಕನ್ನಡ ಕಾವ್ಯಗಳ ಛಂದೋ ಗತಿಗೆ ಭರತನಾಟ್ಯವನ್ನು ಅಳವಡಿಸಿ, ಕಾವ್ಯಗಳನ್ನು ರಸಿಕರಿಗೆ ತಲುಪಿಸುವ ನಿಟ್ಟಿನಲ್ಲಿ 'ಕಾವ್ಯ-ನೃತ್ಯ'-ಎಂಬ ವಿಶಿಷ್ಟ ಪರಿಕಲ್ಪನೆಯಲ್ಲಿ ಈವರೆಗೆ ವಿದ್ವಾನ್ ಜಿ ಎಸ್ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಎರಡು ನೃತ್ಯ ರೂಪಕಗಳನ್ನು ಸಂಯೋಜಿಸಿ ಪ್ರದರ್ಶಿಸಿ ಹಿರಿಯ ಕಲಾವಿದರ, ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
೨೦೦೯-೧೦ ನೇ ಸಾಲಿನ ಸಂಗೀತ ನೃತ್ಯ ಅಕಾಡಮಿಯ ಶಿಷ್ಯವೇತನ ಪಡೆದಿರುವ ಇವರು ಕಳೆದ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಾವ್ಯಗಳ, ಸಾಹಿತ್ಯದ ಅಧ್ಯಯನ ಮಾಡುತ್ತಾ ಶಿಷ್ಟ ಕಾವ್ಯಗಳ ಪ್ರಸಾರಕ್ಕೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುವ ಹಂಬಲ ಹೊಂದಿದ್ದಾರೆ. ಭಾರತೀಯ ಶಾಸ್ತ್ರೀಯ ಕಲೆಗಳಲ್ಲಿ ಆಸಕ್ತರಾಗಿರುವ ಇವರು ನಿರಂತರ ಸಾಧನೆ ಮಾಡುತ್ತಾ, ಕಲಿಸುತ್ತಾ ,ಮಕ್ಕಳಲ್ಲೂ ಕಲಾಭಿರುಚಿ ಮೂಡಿಸುವ ಆಶಯ ಹೊಂದಿದ್ದಾರೆ.