05/08/2026
ಭಾರತೀಯ ಭಾಷಾ ಸಂಸ್ಥಾನದಲ್ಲಿ ಕರುನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳ ಕುರಿತು ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಚಾಲನೆ
ಈ ದಿನ (ಆಗಸ್ಟ್ 5, 2026 ರಂದು) ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾದ "ಕರುನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳು" ಕುರಿತ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರವು ಸಂಸ್ಥಾನದ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಾಗಾರವನ್ನು ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಕುಲಪತಿಗಳಾದ ಪ್ರೊ. ಡಿ. ವಿ. ಪರಮಶಿವಮೂರ್ತಿ ಅವರು ಉದ್ಘಾಟಿಸಿದರು. ಧಾರವಾಡದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಶ್ರೀನಿವಾಸ ಪಾಡಿಗಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರಾದ ಪ್ರೊ. ಬಸವರಾಜ ಕೋಡಗುಂಟಿ ವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಶಾಸ್ತ್ರೀಯ ಭಾಷೆಗಳ ಸಂಯೋಜಕರಾದ ಡಾ. ಎಲ್. ಆರ್. ಪ್ರೇಮ್ ಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾದ ಪ್ರೊ. ಎನ್. ಎಂ. ತಳವಾರ ಅವರು ಕಾರ್ಯಾಗಾರದ ಉದ್ದೇಶ, ಮಹತ್ವ ಹಾಗೂ ಕಾರ್ಯಯೋಜನೆಯನ್ನು ವಿವರಿಸಿದರು.
ಎರಡು ದಿನಗಳ ಈ ಕಾರ್ಯಾಗಾರದಲ್ಲಿ ತಮಿಳುನಾಡು, ಪುದುಚೇರಿ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ನೇಪಾಳ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಪ್ರದೇಶಗಳಲ್ಲಿ ದೊರೆತಿರುವ ಕನ್ನಡ ಶಾಸನಗಳ ಕುರಿತು ವಿಷಯ ತಜ್ಞರಿಂದ ಹಾಗೂಕೇಂದ್ರದ ಫೆಲೋಗಳಿಂದ ಉಪನ್ಯಾಸ ಗಳು ಹಾಗೂ ಸಂಶೋಧನಾ ಪ್ರಬಂಧಗಳ ಮಂಡನೆ ನಡೆಯಲಿದ್ದು, ಶಾಸನ ಅಧ್ಯಯನ, ಸಂರಕ್ಷಣೆ ಹಾಗೂ ಸಂಶೋಧನೆಗೆ ಹೊಸ ಆಯಾಮಗಳನ್ನು ನೀಡುವ ಉದ್ದೇಶ ಹೊಂದಿದೆ.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಫೆಲೋಗಳಾದ ಡಾ. ರಾಧಾಮಣಿ ಎಂ. ಎ. ಮತ್ತು ಡಾ. ಸಣ್ಣಯ್ಯ ಜಿ. ಎಸ್. ಈ ಕಾರ್ಯಾಗಾರದ ಸಂಚಾಲಕರಾಗಿದ್ದಾರೆ.
Ministry of Education