11/02/2026
ಬೆಳಕು ವೃದ್ದಾಶ್ರಮದ ಕೆ.ಗೀತಾಗೆ ನಿವೇದಿತಾ ಪ್ರಶಸ್ತಿ.
ನಿವೇದಿತಾ ಶಾಲೆಯ ವಾರ್ಷಿಕೋತ್ಶವ ಸಮಾರಂಭ
ಅರಕಲಗೂಡು : ಭಾರತೀಯ ಮಹಿಳೆಯರ ಸಾಮಾಜಿಕ ಕಳಕಳಿ,ಸಂತೋಷ ಉದಾತ್ತ ವ್ಯಕ್ತಿತ್ವವೂ ರಾಷ್ಟ್ರೀಯ ಜೀವನದ ಸ್ವತ್ತ ಎಂಬುದನ್ನು ಪ್ರತಿಪಾದಿಸಿದವರು ಸೋದರಿ ನಿವೇದಿತಾ ಅವರು,ಇಂತವರ ಹೆಸರಿನಲ್ಲಿ ಶಾಲಾ ಶಿಕ್ಷಣ ಸಂಸ್ಥೆಯೊಂದು ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವವರಿಗೆ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಅರ್ಥಪೂರ್ಣ ಹಾಗು ಇತರೆ ಶಾಲೆಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಿವರಾಮೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣ ಶಿಕ್ಷಕರ ಭವನದಲ್ಲಿ ನಡೆದ ನಿವೇದಿತಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನಿವೇದಿತಾ ವಿದ್ಯಾಶಾಲೆಯ 30ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೆಳಕು ವೃದ್ಧಾಶ್ರಮದ ಸಂಸ್ಥಾಪಕಿ ಶ್ರೀಮತಿ ಕೆ.ಗೀತಾ ಅವರಿಗೆ 2025-26ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಜಿಲ್ಲೆಯ ಮಟ್ಟಿಗೆ 300ಕ್ಕೂ ಅಧಿಕ ಸಂಖ್ಯೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.ಭರ್ಜರಿಯಾಗಿ ಪ್ರತಿವರ್ಷವೂ ಲಕ್ಷಾಂತರರೂ ವ್ಯಯಮಾಡಿ ವಾರ್ಷಿಕೋತ್ಸವ ಸೇರಿದಂತೆ ಇತರೆ ಮನರಂಜನೆ ಕಾರ್ಯಕ್ರಮಗಳನ್ನು ಮಾಡುತ್ತವೆ.ಆದರೆ ಅರಕಲಗೂಡಿನ ನಿವೇದಿತಾ ವಿದ್ಯಾಶಾಲೆ ಈ ಎಲ್ಲಾ ಶಾಲೆಗಳಿಗೆ ಮಾದರಿಯಾಗಿ ನಿಜವಾಗಿ ಅರ್ಹತೆ ಇರುವ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡಿರುವ ಅದರಲ್ಲಿಯೂ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿ,ಕುಟುಂಬದವರಿಂದ ಬೇಡವಾದ ವಯೋವೃದ್ಧರಿಗೆ ಆಶ್ರಯ ನೀಡಿರುವ ರಾಮನಾಥಪುರದ ಬೆಳಕು ವೃದ್ಧಾಶ್ರಮದ ಗೀತಾ ಕೆ. ಅವರ ಕಾರ್ಯಸಾಧನೆ ಅತೀವ ಸಂತಸವನ್ನುಂಟುಮಾಡಿದೆ ಎಂದು ಹೇಳಿದರು.
ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ಬಂದಂತಹ ಹಣದಲ್ಲಿ ಒಂದು ಎಕರೆ ಕೃಷಿ ಜಮೀನು ಖರೀದಿಸಿ ಕೋವಿಡ್ ಸಂದರ್ಭದಲ್ಲಿ ವೃದ್ಧಾಶ್ರಮವನ್ನು ತೆರೆದು ಸುಮಾರು 20ಕ್ಕೂ ಹೆಚ್ಚಿನ ವೃದ್ಧರಿಗೆ ಆಶ್ರಯವನ್ನು ನೀಡಿ ಅವರನ್ನು ತನ್ನ ಕುಟುಂಬದವರಂತೆ ಪೋಷಣೆ ಮಾಡುತ್ತಿರುವುದನ್ನು ಕೇಳಿ ತುಂಬಾ ಅಭಿಮಾನ ಉಂಟಾಗಿದೆ.ಹಾಲಿ ತಿಂಗಳಿಗೆ ಬರುವ ನಿವೃತ್ತಿ ವೇತನದಲ್ಲಿ ಆಶ್ರಮ ನಡೆಸುತ್ತಿದ್ದಾರೆ.ಇಂತವರ ನೆರವಿಗೆ ಸರಕಾರ,ಸಂಘ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಕೈಜೋಡಿಸಬೇಕಿದೆ ಎಂದರು.ತಾವು ಕೂಡ ನೆರವಿಗೆ ಬರುವುದಾಗಿ ಭರವಸೆ ನೀಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಗೀತಾ ಅವರು,ನಾನು ಕೂಡ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ.ನನ್ನ ಜೀವನದಲ್ಲಿ ನೋಡಿಕೊಂಡು ಬೆಳೆದ,ಅನುಭವಿಸಿದ ಸಮಾಮಾಜಿಕ ಅಸಮಾನತೆ,ತಾರತಮ್ಯ,ಹಿರಿಯರ ಶೋಷಣೆ ಕಣ್ಣುಮುಂದೆ ಇವೆ.ನನ್ನಿಂದ ಸಾಧ್ಯವಾಗುವ ನಿಟ್ಟಿನಲ್ಲಿ ಬೆಳಕು ಆಶ್ರಮವನ್ನು ತೆರೆದು ವೃದ್ಧರಿಗೆ ಆಶ್ರಯ ನೀಡಿದ್ದೇನೆ.ಇದು ನನಗೆ ಹೆಚ್ಚುಗಾರಿಕೆಯಲ್ಲ.ಸಮಾಜದಿಂದ ಪಡೆದಿರುವುದು ಹೆಚ್ಚಿದೆ.ಸಮಾಜಕ್ಕಾಗಿ ಕನೀಷ್ಠ ಪ್ರಮಾಣದಲ್ಲಾದರೂ ಸೇವೆ ಸಲ್ಲಿಸುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ವಿಜಯ್ಕುಮಾರ್ ಮಾತನಾಡಿ,ಪಟ್ಟಣದಲ್ಲಿ ಹತ್ತಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.ಇವೆಲ್ಲವೂ ವ್ಯವಹಾರಿಕವಾಗಿ ತೊಡಗಿಕೊಂಡಿವೆ.ಆದರೆ ಸಾಮಾಜಿಕ ಹೋರಾಟದಲ್ಲಿ ತೊಡಗಿಕೊಂಡಿರುವ ಹಿರಿಯ ಪತ್ರಕರ್ತರಾದ ಎ.ಆರ್.ಸುಬ್ಬರಾವ್ ಅವರು ಸ್ವಾಮಿ ವಿವೇಕಾನಂದರು,ಸಹೋದರಿ ನಿವೇದಿತಾ ಅವರ ಪ್ರಭಾವದಿಂದ ಪ್ರೇರಿತವಾಗಿ ಕಳೆದ 30ವರ್ಷಗಳ ಹಿಂದೆ ಆರಂಭಿಸಿದ ನಿವೇದಿತಾ ವಿದ್ಯಾಶಾಲೆಯಲ್ಲಿ ನೂರಾರು ಮಕ್ಕಳು ಅತೀ ಕಡಿಮೆ ಶುಲ್ಕದೊಂದಿಗೆ
ಶಿಕ್ಷಣ ಪಡೆಯುತ್ತಿದ್ದಾರೆ.ಇಡೀ ಶಾಲಾ ಮಕ್ಕಳನ್ನು ತನ್ನ ಕುಟುಂಬದ ಮಕ್ಕಳಂತೆ ಇವರು ಪ್ರೀತಿಸಿ ಪ್ರೋತ್ಸಾಹಿಸುತ್ತಿದ್ದಾರೆ.ಇದರೊಂದಿಗೆ ಪ್ರತಿವರ್ಷವೂ ಕೂಡ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವವರನ್ನು ಗುರುತಿಸಿ ನಗದು ಪುರಸ್ಕಾರದೊಂದಿಗೆ ನಿವೇದಿತಾ ಪ್ರಶಸ್ತಿ ಪ್ರದಾನ ಮಾಡುತ್ತಾ ಶಿಕ್ಷಣ ಕಲಿಯುವ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಕುರಿತು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎ.ಆರ್.ಸುಬ್ಬರಾವ್ ಮಾತನಾಡಿ ಒಂದು ಶಿಕ್ಷಣ ಸಂಸ್ಥೆಯೆಂದರೆ ಅದು ನಿರಂತರ ಚಟುವಟಿಕೆಯಿಂದ ಕೂಡಿರಬೇಕು ಎಂಬುದು ನಮ್ಮ ನಂಬಿಕೆ.ಗ್ರಾಮೀಣ ಭಾಗದಿಂದ ಬರುವ ಮಕ್ಕಳೇ ಹೆಚ್ಚಿರುವ ಶಾಲೆಯಲ್ಲಿ ಶಿಕ್ಷಕರ ತಂಡ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಶಿಕ್ಷಕರ ಸೇವಾ ಮನೋಭಾವವೂ ಸಂಸ್ಥೆಯನ್ನು ಕಳೆದ ಮೂವತ್ತು ವರ್ಷಗಳಿಂದ ಮುನ್ನಡೆಸಿಕೊಂಡು ಬರಲು ಸಾಧ್ಯವಾಗಿದೆ.ಪ್ರಸ್ತುತ ಇರುವ ಸ್ಪರ್ಧೆಯ ನಡುವೆಯೂ ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಎಲ್ಲ ಪೋಷಕ ವರ್ಗ,ಸಮಾಜಕ್ಕೆ ತಾವು ಋಣಿ ಎಂದರು
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವಿಷ್ಣುಪ್ರಕಾಶ್ ಅವರು ನಿವೇದಿತಾ ಶಾಲೆ ತನ್ನದೇ ಸಿದ್ಧಾಂತಗಳೊಂದಿಗೆ ಸಲ್ಲಿಸುತ್ತಿರುವ ಸೇವಾ ಶ್ಲಾಘನೀಯ ಎಂದರು.ನ್ಯಾಯಾಂಗ ಇಲಾಖೆ ನೌಕರ ಸತೀಶ್ ,ಮುಖ್ಯಶಿಕ್ಷಕಿ ರಾಗಿಣಿ ಬಿ.ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಿಕ್ಷಕ ಜ್ಞಾನೇಶ್ ಶಾಲಾ ವಾರ್ಷಿಕ ವರದಿ ಓದಿದರು.
ಸಂಜೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಫೋಟೋ ೧. ನಿವೇದಿತಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿ ಉದ್ಘಾಟಿಸುತ್ತಿರುವುದು.
ಫೋಟೋ ೨. ಶ್ರೀ ಮತಿ ಗೀತಾ ಅವರಿಗೆ ನಿವೇದಿತಾ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು.