17/04/2026
BSc, BCA and BBA courses are available in Yuvaraja's college, University of Mysore for the students who learn Sanskrit as a Language.....
Syllabus Text Books are available 24 hours on the website.... Any student can download himself and study.... no tension.... join Yuvaraja's college for Degree Education....
ಸಂಸ್ಕೃತವನ್ನು ಭಾಷೆಯಾಗಿ ಓದುವವರಿಗೆ BSc, BCA, BBA ಕೋರ್ಸ್ ಗಳು ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಲಭ್ಯ ಇವೆ....
ಪಠ್ಯಪುಸ್ತಕಗಳು 24 ಗಂಟೆಯೂ ವೆಬ್ ಸೈಟ್ ನಲ್ಲಿ ಸಿಗುತ್ತವೆ... ಪದವೀ ತರಗತಿಯಲ್ಲಿ ಸಂಸ್ಕೃತಕ್ಕೆ ಸೇರಿಕೊಳ್ಳಿ.... ಎಲ್ಲರಿಗೂ ಆದರದ ಸ್ವಾಗತ...
ಇದು ವೆಬ್ ಸೈಟ್....
DrDeepakBhat - Yuvaraja's College
Back University of Mysore Yuvaraja's College, Mysuru. Department of Sanskrit Hearty Welcome ! Learn Sanskrit !! Dr. Deepak Bhat Mobile / WhatsApp : 944 86 03 199. Notification Department My Channel : Jnana-Sudha Academic Year : 2020-21 1st
19/03/2026
ಎಲ್ಲರಿಗೂ ಯುಗಾದಿ ಹಬ್ಬದ ಮತ್ತು ಪರಾಭವ ಎಂಬ ಹೆಸರಿನ ಹೊಸ ವರ್ಷದ ಶುಭಾಶಯಗಳು.. ಹೆಚ್ಚಿನ ಜನರು ಆಕರ್ಷಕವಾಗಿ ಮಾತನಾಡಿ, ಯೂಟ್ಯೂಬ್ ನಲ್ಲಿ ಅದನ್ನು ವೀಕ್ಷಿಸಿ, ತಾವು ದುಡ್ಡು ಮಾಡುವ ಆಲೋಚನೆಯಲ್ಲಿ ಇರುತ್ತಾರೆ. ಯಾರು ಯಾವ ವಿಷಯವನ್ನು ತಿಳಿದಿಲ್ಲವೋ ಅವರು ಇಂತಹ ವೀಡಿಯೋಗಳನ್ನು ನೋಡಿ, ತಪ್ಪು ತಪ್ಪಾಗಿಯೇ ತಿಳಿಯುತ್ತಾರೆ. ಆದರೆ ಇಂತಹ ತಪ್ಪುಗಳನ್ನು ತಿದ್ದುತ್ತಾ ಇರಲು ಯಾರಿಗೂ ಸಾಧ್ಯವಿಲ್ಲ... ನನಗೆ ಸಮಯವೂ ಇಲ್ಲ... ಪ್ರತಿವಾರ ಹೊಸ ಹೊಸ ಲೇಖನಗಳನ್ನು ಬರೆಯಲೂ ಸಮಯವಿಲ್ಲ... ನಿನ್ನೆ ಒಂದು ವೀಡಿಯೋ ನೋಡಿದೆ... ತಿಥಿ, ನಕ್ಷತ್ರ, ಮಾಸ (ತಿಂಗಳು), ಯೋಗ, ಕರಣ ಎಂಬ 5 ಅಂಗಗಳು ಇರುವುದರಿಂದ ಅದು ಪಂಚಾಂಗವಾಗುತ್ತದೆ. ಇದು ಶುದ್ಧ ಸುಳ್ಳು ಮತ್ತು ತಪ್ಪು...
ಪಂಚಾಂಗವನ್ನು ಎರಡು ವಿಧವಾಗಿ ಹೇಳಬಹುದು... ತಿಥಿ, ವಾರ, ನಕ್ಷತ್ರ, ಯೋಗ, ಕರಣ - ಇವು 5 ಇರುವುದರಿಂದ ಪಂಚಾಂಗ. ಇದೇ ಸರಿಯಾದ ವಿಷಯ. ಇದರಲ್ಲಿ ಮಾಸ (ತಿಂಗಳು) ಸೇರಿಸಲು ಆಗುವುದಿಲ್ಲ. ಮಾಸವನ್ನು ಇಟ್ಟುಕೊಂಡು ಪಂಚಾಂಗ ಎಂಬುದನ್ನು ವಿವರಿಸುವುದಾದರೆ - ಸಂವತ್ಸರ, ಅಯನ, ಋತು, ಮಾಸ ಮತ್ತು ಪಕ್ಷ - ಈ 5 ಅಂಗಗಳು ಕಾಲಕ್ಕೆ ಇವೆ ಎಂದಿಟ್ಟುಕೊಂಡು ಪಂಚಾಂಗ ಎಂದೂ ಕೆಲವರು ಹೇಳುತ್ತಾರೆ. ಇದೂ ಸರಿಯಾಗಿಯೇ ಇದೆ. ಆದರೆ ತಿಥಿ-ವಾರಗಳ ಜೊತೆ ಮಾಸವನ್ನು ಸೇರಿಸಲು ಆಗುವುದಿಲ್ಲ. ಇದು ತಪ್ಪು.
ಇಂದಿನಿಂದ ಪ್ರಾರಂಭವಾದ ಸಂವತ್ಸರದ ಹೆಸರು ಪರಾಭವ. ಪರಾಭವ ಎಂಬ ಶಬ್ದದ ಅರ್ಥ ಸೋಲು. ಆದ್ದರಿಂದ ಈ ವರ್ಷ ಪೂರ್ತಿ ಸೋಲು ಆಗುತ್ತದೆಯೇ ? ಎಂದೂ ಕೆಲವರು ಕೇಳಿದ್ದಾರೆ. ಇನ್ನು ಕೆಲವರು ಕೆಟ್ಟ ವಿಚಾರಗಳಿಗೆ ಸೋಲು ಉಂಟಾಗಿ, ಒಳ್ಳೆಯದಕ್ಕೆ ಗೆಲುವು ಸಿಗುತ್ತದೆ ಎಂಬ ಸಮಾಧಾನವನ್ನೂ ಹೇಳಿದ್ದಾರೆ. ಇದರ ಬಗ್ಗೆ ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ. ಹಾಗೆ ಶಬ್ದದ ಅರ್ಥವನ್ನು ಇಟ್ಟುಕೊಂಡು ಅರ್ಥವನ್ನು ಹೇಳುವುದಾದರೆ, ಮುಂದೆ 49ನೇ ಸಂವತ್ಸರ ರಾಕ್ಷಸ ಇದೆ. ಆಗ ಎಲ್ಲರೂ ರಾಕ್ಷಸರಾಗುತ್ತಾರೆಯೇ ? 58 ನೇ ಸಂವತ್ಸರ ರಕ್ತಾಕ್ಷಿ ಇದೆ. ರಕ್ತ+ಅಕ್ಷಿ ಅಂದರೆ ಕೆಂಪು ಕಣ್ಣು. ಅಂದರೆ ರೋಗದಿಂದ ಎಲ್ಲರ ಕಣ್ಣು ಕೆಂಪಾಗುತ್ತದೆಯೇ ? ಅಥವಾ ಎಲ್ಲರಿಗೂ ಸಿಟ್ಟು ಜಾಸ್ತಿಯಾಗಿ ಕಣ್ಣು ಕೆಂಪಾಗುತ್ತದೆಯೇ ? ಇದು ಖಂಡಿತವಾಗಿಯೂ ಸುಳ್ಳು. ಕೆಲವು ಅನ್ವರ್ಥ ನಾಮಗಳಲ್ಲಿ ಮಾತ್ರ ಇಂತಹ ಅರ್ಥವನ್ನು ಸ್ವೀಕರಿಸಬೇಕು. ಪ್ರತಿಯೊಂದು ಶಬ್ದಕ್ಕೂ ಅದರ ಅರ್ಥದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆದ್ದರಿಂದ ಪರಾಭವ ಸಂವತ್ಸರದಲ್ಲಿ ಎಲ್ಲರಿಗೂ ಸೋಲಾಗುತ್ತದೆ ಎಂದು ಭಾವಿಸುವ ಅಗತ್ಯವಿಲ್ಲ. ಕೆಟ್ಟದ್ದಕ್ಕೆ ಸೋಲಾಗುತ್ತದೆ ಎಂಬ ಕಲ್ಪನೆ ಮಾಡುವ ಅಗತ್ಯವೂ ಇಲ್ಲ. ಒಂಟಿಕೊಪ್ಪಲ್ ಮೈಸೂರು ಪಂಚಾಂಗದಲ್ಲಿ ಪರಾಭವ ಎಂಬುದಕ್ಕೆ ಸೋಲು ಎಂಬ ಅರ್ಥವನ್ನು ಬಹುಶಃ ಕೊಟ್ಟಿದ್ದಾರೆ. ಹೀಗೆ ಪಂಚಾಂಗದಲ್ಲಿ ಇದ್ದರೂ ಅವೆಲ್ಲವೂ ವರ್ಷ ಪೂರ್ತಿ ಯಾರಿಗೂ ಅನುಭವಕ್ಕೆ ಬರುವುದಿಲ್ಲ.. ಆದ್ದರಿಂದ ಇಂತಹ ಚಿಂತೆ ಯಾರ ಮನಸ್ಸಿನಲ್ಲಾದರೂ ಇದ್ದರೆ ಅದನ್ನು ಪೂರ್ತಿಯಾಗಿ ಬಿಟ್ಟುಬಿಡಿ. ನೆಮ್ಮದಿಯಿಂದ ಬದುಕಿ....
ರಾಜ ಅಂದರೆ ದೇಶದ ರಾಜ ಅಥವಾ ಈಗಿನ ವ್ಯವಹಾರದಲ್ಲಿ ರಾಷ್ಟ್ರದ ಅಧ್ಯಕ್ಷ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ಮಂತ್ರಿಗಳು ಅಥವಾ ರಾಜಕಾರಣಿಗಳು ಕೆಟ್ಟವರಾಗಿದ್ದರೆ ಆ ದೇಶದ ಜನರಿಗೆ ಕೆಡುಕಾಗುವುದಂತೂ ನಿಜ. ಇಲ್ಲಿ ನಾನು ವೈಯಕ್ತಿಕವಾಗಿ ಖಮೇನಿ-ನೇತನ್ಯಾಹು ಇವರನ್ನು ಯಾರನ್ನೂ ಹೊಗಳುವುದೂ ಇಲ್ಲ ಮತ್ತು ತೆಗಳುವುದೂ ಇಲ್ಲ. ಆದರೆ ಇರಾನ್-ಇಸ್ರೇಲ್ ಇವೆರಡು ದೇಶಗಳು ಯುದ್ಧ ಮಾಡುತ್ತಿದ್ದಾಗ, ನಡುವಿನಲ್ಲಿ ಬಂದವನು ಅಧಿಕ ಪ್ರಸಂಗಿ ಟ್ರಂಪ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಇರಾನ್ ದೇಶ ಕೆಟ್ಟದ್ದೇ ಇರಬಹುದು. ಆದರೆ ಇನ್ನೊಂದು ದೇಶದ ಆಡಳಿತದಲ್ಲಿ ತಲೆ ಹಾಕುವ ಅಗತ್ಯ ಬೇರೆಯವರಿಗೆ ಇಲ್ಲ.. ಅಲ್ಲಿನ ರಾಜ ಸರಿ ಇಲ್ಲ ಎಂದಾದರೆ ಜನರೇ ದಂಗೆ ಎದ್ದು, ರಾಜನನ್ನು ಬದಲಾಯಿಸುತ್ತಾರೆ. ಅದಕ್ಕೋಸ್ಕರ ಟ್ರಂಪ್ ಹೋಗುವ ಅಗತ್ಯವೇ ಇರಲಿಲ್ಲ. ಇಂತಹ ತಪ್ಪು ನಿರ್ಧಾರಗಳಿಂದ ಸಾಮಾನ್ಯ ಜನರ ಜೀವನ ಸಂಪೂರ್ಣವಾಗಿ ಹಾಳಾಗುತ್ತದೆ. ಜನರು ಸಾಯುತ್ತಾರೆ. ಆದ್ದರಿಂದ ಗ್ರಹಗಳು ಕೆಟ್ಟ ಸ್ಥಿತಿಯಲ್ಲಿ ಇದ್ದರೂ ರಾಷ್ಟ್ರದ ರಾಜನಾದವನು ಸರಿಯಾದ ಮಾರ್ಗದಲ್ಲಿ ಇದ್ದರೆ ಜಗತ್ತಿಗೆ ಕೆಡುಕು ಉಂಟಾಗುವುದಿಲ್ಲ.
ಇನ್ನು ಕೇವಲ ಜ್ಯೋತಿಷ್ಯವನ್ನೇ ಆಧಾರವಾಗಿಟ್ಟುಕೊಂಡು ಹೇಳುವುದಾದರೆ - ಈಗ ಶನಿ ಮತ್ತು ಗುರು ಇವರನ್ನು ಹೊರತು ಪಡಿಸಿ ಉಳಿದೆಲ್ಲ ಗ್ರಹಗಳು ರಾಹುವಿನ ಜೊತೆ ಕುಂಭದಲ್ಲಿ ಬಂದು ಸೇರಿರುವುದು ನಿಜ. ಇದಕ್ಕೆ ಒಳ್ಳೆಯ ಫಲವಿಲ್ಲ. ಆದರೆ ಆ ಕುಂಭದಲ್ಲಿರುವ ರಾಹುವಿಗೆ ಗುರುವಿನ ದೃಷ್ಟಿ ಇದೆ. ಇದು ಶತ್ರುದೃಷ್ಟಿ ಆಗಿಲ್ಲ. ಶುಕ್ರ ಮತ್ತು ಬುಧರಿಗೆ ಶತ್ರುದೃಷ್ಟಿಯೇ ಆಗಿದೆ. ಆದರೆ ರಾಹುವಿನ ಮನೆಯ ಅಧಿಪತಿ ಶನಿಗೆ ಶತ್ರುವಾಗಿಲ್ಲ. ಈ ಕಾರಣದಿಂದ ಕೇವಲ ಗ್ರಹಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ ಸಾವಿರಾರು ಜನರ ಸಾವಿಗೆ ಕಾರಣವಾಗಬಹುದಾದ ಕೆಟ್ಟ ಗ್ರಹಸ್ಥಿತಿಯಲ್ಲ.......
ಹಾಗಾದರೆ ಜ್ಯೋತಿಷ್ಯ ಸುಳ್ಳೇ ? ನಿಜವೇ ? ಈ ಗೊಂದಲ ಉಂಟಾಗುವುದು ನಿಜ. ಅದಕ್ಕೋಸ್ಕರವಾಗಿಯೇ ಪ್ರಾಚೀನ ಆಚಾರ್ಯರು ಜ್ಯೋತಿಷ್ಯದಲ್ಲಿ ಸಿದ್ಧಾಂತ, ಸಂಹಿತಾ, ಹೋರಾ ಎಂಬ 3 ವಿಭಾಗಗಳನ್ನು ಮಾಡಿದ್ದಾರೆ. ಸಿದ್ಧಾಂತದಲ್ಲಿ ಕೇವಲ ಲೆಕ್ಕ ಅಂದರೆ ಗ್ರಹಗಳು ಎಲ್ಲಿವೆ ಎಂಬುದನ್ನು ನಿಖರವಾಗಿ ಲೆಕ್ಕ ಮಾಡುವ ಕ್ರಮವನ್ನು ಹೇಳಿದ್ದಾರೆ. ಸಂಹಿತಾಭಾಗದಲ್ಲಿ ಜಗತ್ತಿಗೆ ಸಹಜವಾಗಿ ಉಂಟಾಗುವ ಅಪಾಯಗಳನ್ನು ಹೇಳಿದ್ದಾರೆ. ಕೆಲವು ಯುದ್ಧದ ವಿಚಾರಗಳೂ ಇವೆ. ಆದರೆ ಕಾರಣವಿಲ್ಲದೆ ಮಾಡುವ ಯುದ್ಧಗಳನ್ನು ಈ ಗ್ರಂಥಗಗಳಲ್ಲಿ ಹುಡುಕುವುದು ಕಷ್ಟ. (ವೈಯಕ್ತಿಕ ಪ್ರತಿಷ್ಠೆಗೋಸ್ಕರ ನಡೆಯುವ ಯುದ್ಧಗಳನ್ನು ಹೇಳಲು ಸಾಧ್ಯವಿಲ್ಲ). ಮುಖ್ಯವಾಗಿ ಪ್ರಕೃತಿ ವಿಕೋಪಗಳು. ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಚಂಡಮಾರುತ ಇತ್ಯಾದಿ. ಇವು ಮಾನವ ನಿರ್ಮಿತ ಅಲ್ಲ. ಪ್ರಕೃತಿಯಲ್ಲಿ ಸಹಜವಾಗಿ ಉಂಟಾಗುತ್ತವೆ. ಇಂತಹ ವಿಕೋಪಗಳನ್ನು ಸಂಹಿತಾಭಾಗದಿಂದ ಹೇಳಬೇಕು. ಇನ್ನು ಹೋರಾ ಅಂದರೆ ಜನರು ಹುಟ್ಟಿದ ಜಾತಕದ ಫಲ. ಇಲ್ಲಿ ಮುಹೂರ್ತ ಫಲವನ್ನೂ ಗಮನಿಸಬೇಕು.. ಆದ್ದರಿಂದ ಜಗತ್ತಿನ ವಿಕೋಪಗಳಿಗೆ ಸಂಹಿತಾಭಾಗವನ್ನು ಬಳಸಿದರೆ ಸಾಕು...
ಇನ್ನೊಬ್ಬರ ಸಾವನ್ನು ವೈಭವೀಕರಿಸುವುದು ಒಳ್ಳೆಯದಲ್ಲ. ಆದರೂ ಖಮೇನಿಗೆ ತುಂಬ ಕಷ್ಟ ಇದೆ ಎಂದು ಹೇಳಬೇಕಾದರೆ ಅಥವಾ ಖಮೇನಿಯೇ ಸೋಲುವುದು ಎಂದು ಹೇಳಬೇಕಾದರೆ ಆ ಖಮೇನಿಯ ನಿಖರವಾದ ಹುಟ್ಟಿದ ದಿನಾಂಕ ಮತ್ತು ಸಮಯ ಬೇಕು. ಗೂಗಲ್ ನಲ್ಲಿ ಸಿಗುವ ಜನ್ಮ ದಿನಾಂಕದ ಮಾಹಿತಿಗಳು ನಿಖರವಾಗಿ ಇರುವುದಿಲ್ಲ. ಹೀಗಿರುವಾಗ ಇಂತಹ ತಪ್ಪು ಮಾಹಿತಿಗಳನ್ನು ಇಟ್ಟುಕೊಂಡು ಏನಾದರೂ ಹೇಳಿದರೆ, ನಮ್ಮ ಮಾತೆಲ್ಲವೂ ಸುಳ್ಳಾಗುತ್ತದೆ. ಆದ್ದರಿಂದ ಇಂತಹ ವ್ಯಕ್ತಿಗಳ ಫಲವನ್ನು ಹೇಳಬೇಕಾದರೆ, ಅವರ ಬಗ್ಗೆ ನಿಖರವಾದ ಮಾಹಿತಿ ಬೇಕಾಗುತ್ತದೆ. ಈ ವ್ಯಕ್ತಿ ಸಾಯುತ್ತಾನೆ ಎಂದು ಗೊತ್ತಾಗದೇ ಇದ್ದರೂ ತುಂಬ ಕಷ್ಟ ಇದೆ ಎಂಬುದನ್ನು ನಿಖರವಾಗಿ ಹೇಳಬಹುದು, ಆದರೆ ಅವರ ಜನ್ಮದಿನಾಂಕ ಮತ್ತು ಸಮಯಗಳು ನಿಖರವಾಗಿ ನಮಗೆ ಗೊತ್ತಿರುವುದಿಲ್ಲ. ಆದ್ದರಿಂದ ಫಲ ಹೇಳಲು ಸಾಧ್ಯವಿಲ್ಲ..
ಹಾಗೆಯೇ ವೈಯಕ್ತಿಕ ಪ್ರತಿಷ್ಠೆಗೋಸ್ಕರ ಪ್ರಾರಂಭವಾದ ಯುದ್ಧ ಯಾವಾಗ ನಿಲ್ಲುತ್ತದೆ ? ಎಂಬುದನ್ನು ತಿಳಿಸುವುದೂ ಕಷ್ಟ. ಕುಜ, ಶುಕ್ರ, ಬುಧ, ರವಿ ಇವರೆಲ್ಲ ರಾಹುವನ್ನು ಬಿಟ್ಟು ಮೀನ ರಾಶಿಗೆ ಬಂದಾಗ ಇದರ ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ ಎನ್ನಬಹುದು. ಅಂದರೆ ಎಪ್ರಿಲ್-ಮೇ-2026 ರ ಅನಂತರ ಸ್ವಲ್ಪ ನೆಮ್ಮದಿಯು ಸಿಗುತ್ತದೆ. ಆದರೆ ಯುದ್ಧವನ್ನೇ ಮಾಡುವವರಿಗೆ ಇದರ ಸಂಬಂಧ ಇಲ್ಲ. ಒಳ್ಳೆಯ ಸಮಯ ಇದ್ದರೂ - ಉಕ್ರೇನ್-ರಷ್ಯಾ, ಲೆಬನಾನ್+ಗಾಜಾ+ಇಸ್ರೇಲ್-ಪ್ಯಾಲಿಸ್ತೈನ್ ಗಳಲ್ಲಿ ಯುದ್ಧಗಳು ನಡೆಯುತ್ತಲೇ ಇವೆ. ಆದ್ದರಿಂದ ಇಂತಹ ದ್ವೇಷಗಳನ್ನು ದಿನನಿತ್ಯದ ಕುಂಡಲಿಯಿಂದ ಹೇಳಲು ಪ್ರಯತ್ನಿಸುವುದು ಮೂರ್ಖತನವಾಗಿತ್ತದೆ.
ಇನ್ನೊಂದು ಮುಖ್ಯವಾದ ವಿಚಾರ. ಪರಾಭವ ಎಂಬ ಈ ಸಂವತ್ಸರದಲ್ಲಿ ಸೋಲುಗಳೇ ಉಂಟಾಗುತ್ತವೆ ಎಂದು ಯಾರಾದರೂ ಹೆಳಿದರೆ ಅಥವಾ ಅದು ನಿಜವೇ ಆಗಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಯಾಕೆಂದರೆ ಈ ವರ್ಷದ ಯುಗಾದಿಯ ಪಾಡ್ಯವು ಯಾವುದೇ ದಿನದ ಸೂರ್ಯೋದಯಕ್ಕೆ ಇಲ್ಲ. ಇಂದು ಬೆಳಿಗ್ಗೆ ಸೂರ್ಯೋದಯಕ್ಕೆ ಅಮಾವಾಸ್ಯೆ ಇದೆ. ನಾಳೆ ದ್ವಿತೀಯಾ ಅಂದರೆ ಬಿದಿಗೆ ಇದೆ. ಅಂದರೆ ಪಾಡ್ಯವು ಉಪರಿ ಅಥವಾ ಕ್ಷಯತಿಥಿಯಾಗಿದೆ. ಆದ್ದರಿಂದ ಸಂವತ್ಸರ, ಮಾಸ ಮೊದಲಾದವುಗಳಿಗೆ ಅಧಿಕೃತವಾದ ಅಧಿಪತಿಗಳು ಇರುವುದಿಲ್ಲ. ಸೂರ್ಯೋದಯದ ಸಮಯಕ್ಕೆ ಪಾಡ್ಯ ಇದ್ದಿದ್ದರೆ ಅಧಿಕೃತವಾದ ಅಧಿಪತಿಗಳು ಇರುತ್ತಿದ್ದರು. ಆದರೆ ಸೂರ್ಯೋದಯಕ್ಕೆ ಪಾಡ್ಯ ಇಲ್ಲದ ಕಾರಣದಿಂದ ಇಂತಹ ಫಲವು ಎಲ್ಲರಿಗೂ ಅನುಭವಕ್ಕೆ ಬರುವುದಿಲ್ಲ...
ನಮ್ಮ ಮನೆಯಲ್ಲಿ ಮೊಸರು ಕಡೆದು ಬೆಣ್ಣೆ ಮಾಡುವುದಕ್ಕೆ ಮರದ ಕಡಗೋಲನ್ನು ಮಾಡಿಸಿದ್ದೆ.. ಅದರ ಪ್ರಾರಂಭ ಇನ್ನೂ ಆಗಿರಲಿಲ್ಲ. ಅದಕ್ಕೆ ಹಚ್ಚಿದ ಕೆಮಿಕಲ್-ವಾರ್ನಿಶ್ ಎಲ್ಲ ಹೋಗಲಿ ಅಂತ ಇವತ್ತು ಯುಗಾದಿಯ ದಿನ 3-4 ಗಂಟೆಗಳ ಕಾಲ ಮೊಸರು ನೀರಿನಲ್ಲಿ ಮುಳುಗಿಸಿ ಇಟ್ಟಿದ್ದೆ. ಮುಂದಿನ ಭಾನುವಾರದಿಂದ ಮೊಸರು ಕಡೆಯಲು ಪ್ರಾರಂಭಿಸುತ್ತೇನೆ..
ಎಲ್ಲರಿಗೂ ಮತ್ತೊಮ್ಮೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು... ನಮಸ್ಕಾರ...
02/03/2026
ಅನೇಕರು ಚಂದ್ರ ಗ್ರಹಣದ ಬಗ್ಗೆ ಬರೆದಿದ್ದಾರೆ... ಸಮಯದ ಅಭಾವ ಇದೆ... ವಿವರಣೆಯನ್ನು ಕೊಡುವುದಿಲ್ಲ..
ಮೈಸೂರಿನ ಒಂಟಿಕೊಪ್ಪಲ್ ಪಂಚಾಂಗದಲ್ಲಿ ತಿಳಿಸಿರುವಂತೆ ಮಧ್ಯಾಹ್ನದ ಮೇಲೆ 3 ಘಂಟೆ 13 ನಿಮಿಷಕ್ಕೆ ಗ್ರಹಣ ಪ್ರಾರಂಭ....
ಸಂಜೆ 6 ಘಂಟೆ 47 ನಿಮಿಷಕ್ಕೆ ಗ್ರಹಣ ಮುಗಿಯುತ್ತದೆ.... ಮೈಸೂರಿನಲ್ಲಿ ಚಂದ್ರ ಉದಯ ಸಂಜೆ 6 ಘಂಟೆ 33 ನಿಮಿಷಕ್ಕೆ....
ಅಂದರೆ ಮೈಸೂರಿನಲ್ಲಿ 14 ನಿಮಿಷ ಮಾತ್ರ ಚಂದ್ರ ಗ್ರಹಣ ಅನುಭವಕ್ಕೆ ಸಿಗುತ್ತದೆ.... ಗ್ರಹಣದ ವಿಶೇಷ ದೋಷಗಳು ಇರುವುದಿಲ್ಲ... ತುಂಬ ಸಮಯ ಗ್ರಹಣ ಇದ್ದಾಗ ಅದರ ಫಲ ಹೆಚ್ಚು ಇರುತ್ತದೆ....
ಚಂದ್ರ, ಗುರು ,ಶುಕ್ರ, ಶನಿ ಇವರನ್ನು ಬಿಟ್ಟು ಉಳಿದೆಲ್ಲಾ ಗ್ರಹಗಳು ರಾಹುವಿನ ಜೊತೆ ಇವೆ... ಇದರ ಫಲವನ್ನು ಹೇಳುವ ಅಗತ್ಯ ಇಲ್ಲ... ಯುದ್ಧಗಳು ನಡೆಯುತ್ತಲೇ ಇವೆ.... ಗ್ರಹಣ ಮುಗಿದ ಮೇಲೆ ಒಂದು ತಿಂಗಳು ಮೇಷ, ವೃಶ್ಚಿಕ ರಾಶಿಯವರಿಗೆ ಸ್ವಲ್ಪ ತೊಂದರೆ ಇರಬಹುದು... ಹಾಗೆಯೇ, ಕ್ಯಾಲೆಂಡರ್ ನೋಡಿಕೊಳ್ಳಿ.... ಮೃಗಶಿರಾ , ಚಿತ್ರಾ, ಧನಿಷ್ಠಾ ನಕ್ಷತ್ರ ಇರುವ ದಿನ, ಮಾರ್ಚ್ 6, 7, 16, 24, 25 ಈ ದಿನಾಂಕಗಳಲ್ಲಿ ವಿಶೇಷ ಕೆಲಸ (ಗಾಡಿ ಖರೀದಿ, ಬಾಡಿಗೆ ಮನೆ ಬದಲಾವಣೆ, ಹೊಸ ಮನೆಯ ಗೃಹಪ್ರವೇಶ) ಇತ್ಯಾದಿ ಮಾಡಬೇಡಿ... ಹಾಗೆಯೇ ಇದು ಮೃಗಶಿರಾ, ಪುಷ್ಯ , ಚಿತ್ರಾ, ಅನುರಾಧಾ, ಧನಿಷ್ಠಾ, ಉತ್ತರಾಭಾದ್ರಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಹೆಚ್ಚು ಕೆಟ್ಟ ಫಲವನ್ನು ಕೊಡುತ್ತದೆ... ಮಾರ್ಚ್, ಎಪ್ರಿಲ್ ಈ 2 ತಿಂಗಳ ಅನಂತರ ಕೆಟ್ಟ ಫಲವು ಇರುವುದಿಲ್ಲ... ಕಡಿಮೆಯಾಗುತ್ತದೆ... ನಮಸ್ಕಾರ....
01/03/2026
ಇವತ್ತಿಗೆ ಅಂದರೆ ಫೆಬ್ರವರಿಯ ಮೊದಲ ಭಾನುವಾರದಿಂದ 5 ಭಾನುವಾರಗಳಲ್ಲಿ ಪದ್ಮಭೂಷಣ ಶತಾವಧಾನಿ ಡಾ. ಆರ್. ಗಣೇಶರ ಬಗ್ಗೆ ಬರೆದ ಲೇಖನ ಪೂರ್ತಿಯಾಗಿ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.... ನಮಸ್ಕಾರ....
15/02/2026
ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು...
08/02/2026
ಈ ವಾರದಲ್ಲಿ ಶ್ಲೋಕದ ಒಂದು ಪಾದದ ಮುಕ್ಕಾಲು ಭಾಗ ಪ್ರಕಟಗೊಂಡಿವೆ... ಮುಂದಿನ ವಾರ ಬಹುಶಃ ಪೂರ್ತಿ ಮುಗಿಯಬಹುದು ಎಂಬ ನಿರೀಕ್ಷೆ ಇದೆ ....
ನಮಸ್ಕಾರ... 🙏🙏
05/02/2026
ಈ ಹಿಂದೆ ಅನೇಕ ಬಾರಿ ಹೇಳಿದ್ದೆ.... ಇತ್ತೀಚೆಗೆ ಈ ವಿಷಯವನ್ನು ಹೇಳದೇ ತುಂಬ ದಿನಗಳಾಗಿವೆ...
ಟಿ.ವಿ. ಯ ಚಾನಲ್ ಗಳಲ್ಲಿ ಬಂದು ಜ್ಯೋತಿಷ್ಯ ಹೇಳುವವರು ಜ್ಯೋತಿಷ್ಯದ ಲೆಕ್ಕಗಳನ್ನು ಸ್ವಲ್ಪವೂ ಕಲಿತಿರುವುದಿಲ್ಲ.. ಹೇಳುವುದೆಲ್ಲವೂ ಸುಳ್ಳು ಎಂದಿದ್ದೆ.. ಈಗಲೂ ಅದನ್ನೇ ಹೇಳುತ್ತಿದ್ದೇನೆ...
ಕಮಲಾಕರ ಭಟ್ಟ ಎಂಬ ವ್ಯಕ್ತಿ ಬ್ರಾಹ್ಮಣರ ಹೆಸರನ್ನೂ ಹಾಳು ಮಾಡಿದ.. ಇನ್ನೇನೂ ಮಾಡಿಲ್ಲ... ಜ್ಯೋತಿಷ್ಯದ ಮೂಲಕ ನಿಮಗೆ ತುಂಬಾ ಸಮಸ್ಯೆಗಳಿದ್ದರೆ ಅವುಗಳನ್ನು ತಿಳಿಸಲು ಸಾಧ್ಯವಿದೆ... ಆದರೆ ಜ್ಯೋತಿಷ್ಯದಿಂದ ಪರಿಹಾರ ಮಾಡಲು ಆಗುವುದಿಲ್ಲ.. ಹಾಗೊಂದುವೇಳೆ ಮಾಡಲು ಸಾಧ್ಯವಿದ್ದಿದ್ದರೆ ಎಲ್ಲರೂ ಅದನ್ನೇ ಮಾಡುತ್ತಿದ್ದರು.... ಪರಿಹಾರ ಎಂಬುದು ನಿಮ್ಮ ಭಕ್ತಿಯನ್ನು ಅವಲಂಬಿಸಿದೆ.... ನೀವು ಭಕ್ತಿಯಿಂದ ದೇವರಲ್ಲಿ ಬೇಡಿದಾಗ ನಿಮ್ಮ ಸಮಸ್ಯೆ ಪರಿಹಾರವಾಗಲೂಬಹುದು... ಅದನ್ನು ಇನ್ನೊಬ್ಬರು ಪೂಜೆ ಮಾಡಿ ಬಗೆಹರಿಸಲು ಸಾಧ್ಯವಿಲ್ಲ...
ನಿಜವಾಗಿಯೂ ಈ ಕಮಲಾಕರ ಭಟ್ಟ ಜ್ಯೋತಿಷ್ಯ ಓದಿದ್ದೇ ಆಗಿದ್ದರೆ, ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಜ್ಯೋತಿಷ್ಯದ ಬಗ್ಗೆ ಸ್ಪರ್ಧೆಗಳು ನಡೆಯುತ್ತವೆ... ಅದರಲ್ಲಿ ನಿರ್ಣಾಯಕರಾಗಿ ಭಾಗವಹಿಸಬಹುದು... ಸಂಸ್ಕೃತದಲ್ಲಿಯೇ ಮಕ್ಕಳು ಮಾತನಾಡುತ್ತಾರೆ... ನಿರ್ಣಾಯಕರು ಸಂಸ್ಕೃತದಲ್ಲಿಯೇ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ... ಮಕ್ಕಳು ತಪ್ಪು ಹೇಳಿದರೆ - ಅದು ಹಾಗಲ್ಲ, ನೀನು ಹೇಳಿದ್ದು ತಪ್ಪು, ಸೂರ್ಯಸಿದ್ಧಾಂತದಲ್ಲಿ ಹೀಗಿದೆ, ಭಾಸ್ಕರಾಚಾರ್ಯರ ಸಿದ್ಧಾಂತಶಿರೋಮಣಿಯಲ್ಲಿ ಹೀಗಿದೆ, ಬೀಜಗಣಿತದಲ್ಲಿ ಹೀಗಿದೆ, ಅಂಕಗಣಿತದಲ್ಲಿ ಹೀಗಿದೆ ಎಂದು ಮಕ್ಕಳಿಗೆ ತಪ್ಪುಗಳನ್ನು ತಿದ್ದಿ ಹೇಳಬೇಕಾಗುತ್ತದೆ.... ಇಂತಹ ಉತ್ತಮ ಕೆಲಸಗಳಲ್ಲಿ ಭಾಗವಹಿಸಿ, ನಿಜವಾದ ಕೀರ್ತಿಯನ್ನು ಸಂಪಾದಿಸಬಹುದಿತ್ತು.... ಅದನ್ನು ಬಿಟ್ಟು ಈ ಅಯೋಗ್ಯರು ಟಿವಿಯಲ್ಲಿ ಬಂದು ಏನೇನೋ ಹೇಳುತ್ತಾರೆ.. ಮೂರ್ಖರು ಅದನ್ನೇ ಕೇಳುತ್ತಾ ಇರುತ್ತಾರೆ... (ನನ್ನ ಮನೆಯಲ್ಲಿ ಟಿವಿ ಇಲ್ಲ, ಈವರೆಗೆ ಯಾವುದೇ ಟಿವಿ ಕಾರ್ಯಕ್ರಮಗಳನ್ನು ನಾನು ನೋಡಿಲ್ಲ... )
ಅನ್ನ ಅನಿಸಿಕೆಯ ಪ್ರಕಾರ ಜ್ಯೋತಿಷ್ಯ ವಿದ್ವತ್ / ಆಚಾರ್ಯ ಪದವಿಗಳನ್ನು ಗಳಿಸಿ, Ph.D. ಮಾಡಿರುವುದು ಅನುಮಾನ ಇದೆ.... ಹಾಗೇನಾದರೂ ನಿಜವಾದ ಪಾಂಡಿತ್ಯ ಇದ್ದಿದ್ದರೆ, ವಿಶ್ವವಿದ್ಯಾಲಯದಲ್ಲಿ ಜ್ಯೋತಿಷ್ಯದ ಬಗ್ಗೆ ಉಪನ್ಯಾಸಗಳನ್ನಾದರೂ ಸಂಸ್ಕೃತದಲ್ಲಿಯೇ ಕೊಡಬಹುದಿತ್ತು... ಇಂತಹ ವಿಚಾರಗಳು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ... ಟಿವಿಯಲ್ಲಿ ಬಂದವನು ದೊಡ್ಡ ಮನುಷ್ಯ ಎಂದು ಜನ ಭಾವಿಸುತ್ತಾರೆ... ಕೊನೆಗೆ ಮೋಸ ಹೋಗುತ್ತಾರೆ...
ಜ್ಯೋತಿಷ್ಯ ಅಷ್ಟೊಂದು ಸುಲಭವಾಗಿದ್ದರೆ ಹೇಳಿದ್ದೆಲ್ಲವೂ ಸತ್ಯವಾಗುತ್ತಿತ್ತು... ಒಂದು ಜಾತಕವನ್ನು ನೋಡಲು ಕನಿಷ್ಠ ಒಂದು ಗಂಟೆ ಸಮಯಬೇಕು... ಯಾವ ಗ್ರಹ ಯಾವ ರಾಶಿಯಲ್ಲಿದೆ ? ಎಂಬುದನ್ನು ನೋಡಿ ಫಲವನ್ನು ಹೇಳಲು ಆಗುವುದಿಲ್ಲ... ಡಿಗ್ರಿಗಳನ್ನು ಆಧರಿಸಿ ಲೆಕ್ಕ ಮಾಡಬೇಕಾಗುತ್ತದೆ... ಅದಕ್ಕೆ ಸಮಯ ಬೇಕು... ಪ್ರಾಥಮಿಕ ಗಣಿತವನ್ನು ಕಲಿಯದೇ ಫಲ ಹೇಳುವವರು ಎಲ್ಲರೂ ಮೂರ್ಖರೇ ಆಗಿರುತ್ತಾರೆ... ಏನೂ ಸಂದೇಹವಿಲ್ಲ..
ಯಾರಿಗದರೂ ಜ್ಯೋತಿಷ್ಯ ಕೇಳಬೇಕು ಅಂತ ಆಸೆ ಇದ್ದರೆ ಕೇಳಿ... ಆದರೆ ನಿಮ್ಮ ಸಮಸ್ಯೆ ಪರಿಹಾರ ಮಾಡುತ್ತೇನೆ ಎಂದರೆ ಅವನು ಸುಳ್ಳುಗಾರ ಎಂದರ್ಥ... ಅವನು ಏನೂ ಕಲಿತಿರುವುದಿಲ್ಲ.. ನಮಸ್ಕಾರ...
01/02/2026
ನಮಸ್ಕಾರ....
ಒಂದೇ ಭಾನುವಾರ ಪೂರ್ತಿ ಲೇಖನ ಮುಗಿಯುವುದಿಲ್ಲ...
ಈ ಭಾನುವಾರ ಕೇವಲ ಪೂರ್ವಪೀಠಿಕೆ ಮಾತ್ರ ಇದೆ....
ಮುಂದಿನ ಭಾನುವಾರ ಶ್ಲೋಕ ಮತ್ತು ಅರ್ಥ ಎರಡೂ ಸಿಗುತ್ತದೆ....
ಶ್ಲೋಕವನ್ನು ಓದಲು ತಿಳಿದವರು ಈ ಲೇಖನದಲ್ಲಿಯೂ ಓದಬಹುದು... ಮಹಾಪದ್ಮಬಂಧದ ಚಿತ್ರದಲ್ಲಿ ಶತಾವಧಾನಿಗಳ ಬಗ್ಗೆ ನಾನು ಬರೆದಿರುವ ಶ್ಲೋಕ ಇದೆ. ...
28/01/2026
ಶತಾವಧಾನೇನ ಜಗತ್ಪ್ರಸಿದ್ಧಂ !
ಸಹಸ್ರಧಾ ಸಾಧು ಕೃತಾವಧಾನಮ್ !!
ಸರಸ್ವತೀಪುತ್ರವರಂ ಗಣೇಶಂ !
ನಮಾಮಿ ತಂ ಪದ್ಮಸುಭೂಷಣಾಢ್ಯಮ್ !!
ಶತಾವಧಾನಿಗಳಿಗೆ ಸಾಷ್ಟಾಂಗ ಪ್ರಣಾಮಗಳು...
ಪದ್ಮಭೂಷಣವೋ ? ಪದ್ಮವಿಭೂಷಣವೋ ? ಎಂಬ ಗೊಂದಲ ನನಗಿತ್ತು... ಯಾಕೆಂದರೆ ಟಿವಿ, ವಾರ್ತಾಪತ್ರಿಕೆಗಳನ್ನು ನಾನು ನೋಡುವುದೂ ಇಲ್ಲ... ಸಮಯವೇ ಇಲ್ಲ.... ನನ್ನ ಭಾಷೆಯಲ್ಲಿ ನಾನು ಬರೆದರೆ ಇಲ್ಲಿ ಓದುವವರು ಯಾರೂ ಇಲ್ಲ.... ಕನಿಷ್ಠ 5-6 ಪುಟಗಳ ಸಣ್ಣ ಲೇಖನ ಸುಧರ್ಮಾ ಸಂಸ್ಕೃತ ದಿನಪತ್ರಿಕೆಯಲ್ಲಿ ಕೆಲವು ದಿನಗಳಲ್ಲಿ ಪ್ರಕಟವಾಗಬಹುದು... (ಇನ್ನೂ ಬರವಣಿಗೆ ಪೂರ್ಣವಾಗಿಲ್ಲ)...
ಆಸಕ್ತರು ಸುಧರ್ಮಾ ದಿನಪತ್ರಿಕೆಯನ್ನು ಓದಬೇಕಾಗಿ ವಿನಂತಿ... ನಮಸ್ಕಾರ....
04/01/2026
ಭೀಕರ ಅಗ್ನಿಅವಘಡ: ರೈಲು ನಿಲ್ದಾಣದ ಪಾರ್ಕಿಂಗ್ ನಲ್ಲಿದ್ದ 500 ದ್ವಿಚಕ್ರವಾಹನಗಳು ಸುಟ್ಟು ಭಸ್ಮ! Video
ತ್ರಿಶೂರ್: ಕೇರಳದ ತ್ರಿಶೂರ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ....