02/07/2026
ಕ್ಷೀರ ಪೈಲಟ್ ಯೋಜನೆಯ ಫಲಶ್ರುತಿ: ನಾಗರಾಳ ಗ್ರಾಮದ ಶ್ರೀ ಸಾಹೇಬ ಗೌಡ ಬಾಬಾ ಸಾಹೇಬ ಪಾಟೀಲ ಅವರ ಯಶೋಗಾಥೆ
ತಿಂಗಳಿಗೆ ₹60 ಸಾವಿರದವರೆಗೆ ಆದಾಯ – ವೈಜ್ಞಾನಿಕ ಹೈನುಗಾರಿಕೆಯಿಂದ ಆರ್ಥಿಕ ಸ್ವಾವಲಂಬನೆಯತ್ತ ಯಶಸ್ವಿ ಹೆಜ್ಜೆ
ಈ ದಿನ ನಾಗರಾಳ ಗ್ರಾಮದ ರೈತ ಶ್ರೀ ಸಾಹೇಬ ಗೌಡ ಬಾಬಾ ಸಾಹೇಬ ಪಾಟೀಲ ಅವರನ್ನು ಭೇಟಿ ಮಾಡಿ, ನಮ್ಮ BLDE, ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯಕಲ್ಪ ಫೌಂಡೇಶನ್ಗಳ ಸಹಯೋಗದಲ್ಲಿ ಜಾರಿಗೊಂಡಿರುವ 'ಕ್ಷೀರ ಪೈಲಟ್ ಯೋಜನೆ'ಯಿಂದ ಅವರ ಬದುಕಿನಲ್ಲಿ ಮೂಡಿರುವ ಸಕಾರಾತ್ಮಕ ಪರಿವರ್ತನೆಯ ಕುರಿತು ತಿಳಿದುಕೊಂಡೆ.
ಯೋಜನೆ ಆರಂಭಕ್ಕೂ ಮುನ್ನ ಕೇವಲ ಒಂದು ಹಸುವನ್ನು ಸಾಕುತ್ತಿದ್ದ ಅವರು, ಯೋಜನೆಯಡಿ ನೀಡಲಾದ ವೈಜ್ಞಾನಿಕ ತರಬೇತಿ, ನಿರಂತರ ಮಾರ್ಗದರ್ಶನ ಹಾಗೂ ತಾಂತ್ರಿಕ ನೆರವಿನ ಪ್ರೇರಣೆಯಿಂದ ಇಂದು ತಮ್ಮ ಹೈನುಗಾರಿಕೆಯನ್ನು ವಿಸ್ತರಿಸಿ ಆರು ಹಸುಗಳನ್ನು ಸಾಕುತ್ತಿದ್ದಾರೆ. ಇದರ ಫಲವಾಗಿ ಪ್ರತಿ ತಿಂಗಳು ₹55,000 ರಿಂದ ₹60,000ರವರೆಗೆ ಆದಾಯ ಗಳಿಸುತ್ತಿರುವುದು ತಿಳಿದು ಸಂತಸವಾಯಿತು.
ಕಳೆದ ಆರು ತಿಂಗಳುಗಳಲ್ಲಿ ವೈಜ್ಞಾನಿಕ ಪಶುಪಾಲನೆ, ಆಧುನಿಕ ಹೈನುಗಾರಿಕೆ ವಿಧಾನಗಳು ಹಾಗೂ ಸಮರ್ಪಕ ನಿರ್ವಹಣೆಯನ್ನು ಅಳವಡಿಸಿಕೊಂಡ ಪರಿಣಾಮ, "ಹೈನುಗಾರಿಕೆಯೇ ನಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ರೂಪಿಸಬಲ್ಲ ಉದ್ಯಮ" ಎಂಬ ದೃಢ ವಿಶ್ವಾಸ ಅವರಲ್ಲಿ ಮೂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಸುಗಳನ್ನು ಖರೀದಿಸಿ ತಮ್ಮ ಹೈನುಗಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಸಂಕಲ್ಪವನ್ನೂ ಅವರು ವ್ಯಕ್ತಪಡಿಸಿದರು.
ಇಂತಹ ಯಶೋಗಾಥೆಗಳು ಕ್ಷೀರ ಪೈಲಟ್ ಯೋಜನೆಯ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದ್ದು, ಕೃಷಿಯೊಂದಿಗೆ ಹೈನುಗಾರಿಕೆಯನ್ನು ಸಂಯೋಜಿಸುವ ಮೂಲಕ ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.
ಈ ಸಂದರ್ಭದಲ್ಲಿ ಅಕ್ಷಯಕಲ್ಪ ಸಂಸ್ಥೆಯ ಶ್ರೀ ಸಿ.ಎಂ. ಪಾಟೀಲ, BLDE ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೈನುಗಾರಿಕೆಯ ಮೂಲಕ ರೈತರನ್ನು ಇನ್ನಷ್ಟು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ, ಶೀಘ್ರದಲ್ಲೇ ನಿಡೋಣಿ ಗ್ರಾಮದಲ್ಲಿ BLDE ವತಿಯಿಂದ ಆಧುನಿಕ ಹೈನುಗಾರಿಕೆ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಜ್ಞಾನ, ತಂತ್ರಜ್ಞಾನ ಹಾಗೂ ನಿರಂತರ ಮಾರ್ಗದರ್ಶನದ ಮೂಲಕ ವಿಜಯಪುರ ಜಿಲ್ಲೆಯನ್ನು ಕ್ಷೀರ ಕ್ರಾಂತಿಯ ಮಾದರಿ ಜಿಲ್ಲೆಯಾಗಿ ರೂಪಿಸುವುದು ನಮ್ಮ ಸಂಕಲ್ಪವಾಗಿದೆ.